ನಮ್ಮ ಭಾಷೆ
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಭಾಷೆ ಯಾವುದಕ್ಕೆ ಸಾಧನವಾಗಿದೆ?
ಉತ್ತರ: ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನವಾಗಿದೆ.
2. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ?
ಉತ್ತರ: ಪ್ರಾಣಿಗಳು ತಮ್ಮ ಮಕ್ಕಳಿಗೆ ಚಲನವಲನಗಳ ಮತ್ತು ಆಹಾರ ವಿಚಾರಗಳ ವಿಚಾರವಾಗಿ ಸಹಜವಾಗಿ ತರಪೇತು ಕೊಡುತ್ತವೆ.
3. ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು?
ಉತ್ತರ: ನವಶಿಲಾಯುಗದ ಮಾನವ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ನೆಲೆನಿಂತು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಆರಂಭಿಸಿದಾಗ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.
4. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು?
ಉತ್ತರ: ಎಣ್ಣೆ ಮತ್ತು ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು 12ನೆಯ ಶತಮಾನದ ನಯಸೇನ ಕವಿ.
5. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಉತ್ತರ: ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದವು.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
ಉತ್ತರ: ಜನರು ದೈನಂದಿನ ಜೀವನದಲ್ಲಿ ಮಾತನಾಡುವ ಮತ್ತು ವ್ಯವಹರಿಸುವ ಜೀವದ್ಭಾಷೆಯನ್ನು ವ್ಯಾವಹಾರಿಕ ಭಾಷೆ ಎನ್ನುತ್ತಾರೆ (ಉದಾ: ಕನ್ನಡ, ತಮಿಳು). ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾಗುವ ಭಾಷೆಯನ್ನು ಗ್ರಾಂಥಿಕ ಭಾಷೆ ಎನ್ನುತ್ತಾರೆ (ಉದಾ: ಸಂಸ್ಕೃತ, ಪಾಳಿ).
2. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ?
ಉತ್ತರ: ಓದುಬರಹವಿಲ್ಲದ ಹಳ್ಳಿಯ ಕೆಲಸಗಾರನಾದರೂ ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು ಗೆರೆ ಎಳೆದು ಲೆಕ್ಕಹಾಕಿ ಸಂಬಳ ಪಡೆಯುವಂತೆ, ಪ್ರಾಚೀನ ಮಾನವ ಲೆಕ್ಕವಿಡಲು ಆರಂಭಿಸಿದಾಗ ಲಿಪಿಯ ಜಾಡು ಆರಂಭಗೊಂಡಿತು.
3. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
ಉತ್ತರ: ಮಾನವನು ತನ್ನ ದಿನನಿತ್ಯದ ಆಗುಹೋಗುಗಳನ್ನು ಮತ್ತು ಸುಖದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗ ಕಂಡುಕೊಂಡನು. ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲಲಿಪಿಯನ್ನು ಪರಿಷ್ಕರಿಸುತ್ತಾ ಸಾಹಿತ್ಯ ಕೃತಿಗಳನ್ನು ಬರೆದಿಡಲು ಕಲಿತಾಗ ಪರಂಪರೆಯಿಂದ ಬಂದ ವಿಷಯಗಳನ್ನು ಬರೆದಿಡಲು ಸಾಧ್ಯವಾಗಿ ಜ್ಞಾನ ಭಂಡಾರ ಭದ್ರವಾಯಿತು.
4. ಕನ್ನಡ ಭಾಷೆ ಹದಗೊಂಡದ್ದು ಹೇಗೆ?
ಉತ್ತರ: ಕನ್ನಡ ಭಾಷೆ ಅಭಿವೃದ್ಧಿ ಹೊಂದಲು ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕು ಎಂದು ಅನೇಕ ಕವಿಗಳು ಸಾರಿದರು. ಬಸವೇಶ್ವರ, ಅಲ್ಲಮಪ್ರಭು, ಕುಮಾರವ್ಯಾಸ, ಪುರಂದರದಾಸರಂತಹ ಮಹನೀಯರು ಸುಲಭ ಹಾಗೂ ಸುಂದರವಾದ ಮಾತುಗಳಲ್ಲಿ ಅನುಭವಸಾರವನ್ನು ಅಭಿವ್ಯಕ್ತಪಡಿಸಿದಾಗ ಕನ್ನಡ ಭಾಷೆ ಹದಗೊಂಡಿತು.
5. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು?
ಉತ್ತರ: ಆಂಗ್ಲ ಜನತೆ ಸಾಹಸ ಜೀವಿಯಾಯಿತು ಹಾಗೂ ಸೂರ್ಯನು ಮುಳುಗದಂತಹ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿತು. ಆಂಗ್ಲ ಪಂಡಿತರು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು ತಮ್ಮ ಆಸೆ, ಆಕಾಂಕ್ಷೆ, ಮತ್ತು ವಿಚಾರಗಳನ್ನು ತಮ್ಮದೇ ಭಾಷೆಯ ಮೂಲಕ ಅಭಿವ್ಯಕ್ತಪಡಿಸಬೇಕು ಎಂಬ ಅಭಿಮಾನ ಹೊಂದಿದ್ದರಿಂದ ಆಂಗ್ಲ ಭಾಷೆ ವಿಶ್ವವ್ಯಾಪಿಯಾಯಿತು.
ಇ. ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ?
ಉತ್ತರ: ಒಂದು ಭಾಷೆ ಸತ್ವಪೂರ್ಣವಾಗಿ ಬೆಳೆಯಬೇಕಾದರೆ ಅದನ್ನಾಡುವ ಜನರು ಅಭಿಮಾನಧನರೂ, ಬುದ್ಧಿಶಾಲಿಗಳೂ ಹಾಗೂ ಪ್ರಯೋಗಶೀಲರೂ ಆಗಿರಬೇಕು. ಆಂಗ್ಲ ಜನರಂತೆ ಸಾಹಸಜೀವಿಗಳಾಗಿ, ಇತರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಕ್ತ ಮನಸ್ಸಿನಿಂದ ಅಭ್ಯಸಿಸಿ ತಮ್ಮ ಭಾಷೆಯನ್ನು ವಿಸ್ತರಿಸಬೇಕು.
ಬೇರೆ ಭಾಷೆಗಳಿಂದ ಹೊಸ ಪದಗಳನ್ನು ಎರವಲಾಗಿ ಪಡೆಯುವಾಗಲೂ, ಭಾಷೆಯು ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳದಂತೆ ಕಾಯ್ದುಕೊಳ್ಳಬೇಕು. ಬೇರೆ ಭಾಷೆಗಳನ್ನು ತಿರಸ್ಕರಿಸದೆ, ದ್ವೇಷಿಸದೆ, ಎಲ್ಲಾ ಭಾಷೆಗಳಿಗೂ ತಾಯಿಯ ಗಾನದ ಶ್ರುತಿಯಂತೆ ಸಮಾನ ಗೌರವ ನೀಡಬೇಕು.
ಮೆಧಾವಿಗಳು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು ತಮ್ಮ ಆಸೆ, ಆಕಾಂಕ್ಷೆ ಮತ್ತು ವಿಚಾರಗಳನ್ನು ತಮ್ಮದೇ ಭಾಷೆಯ ಮೂಲಕ ಅಭಿವ್ಯಕ್ತಪಡಿಸಬೇಕು ಎಂಬ ಉಜ್ವಲ ಅಭಿಮಾನ ಹೊಂದಿರಬೇಕು. ಇಂತಹ ದೃಢ ಸಂಕಲ್ಪ ಮತ್ತು ಕೃಷಿಯಿಂದ ಮಾತ್ರ ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುತ್ತದೆ.
2. ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ? ವಿವರಿಸಿ.
ಉತ್ತರ: ಕನ್ನಡ ಭಾಷೆಯು ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ಪಡೆಯುತ್ತಾ ತನ್ನದೇ ಆದ ಶೈಲಿಯಲ್ಲಿ ಬೆಳೆದುಬಂದಿದೆ. ಆರಂಭದಲ್ಲಿ ಪಂಡಿತರು ಜೈನ ಮತ್ತು ವೈದಿಕ ತತ್ವಗಳನ್ನು ವಿವರಿಸಲು ಸಂಸ್ಕೃತ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ನಂತರದ ದಿನಗಳಲ್ಲಿ ನಯಸೇನನಂತಹ ಕವಿಗಳು ಕನ್ನಡದಲ್ಲಿ ಅನಗತ್ಯ ಸಂಸ್ಕೃತ ಪದಗಳ ಬಳಕೆಯನ್ನು ವಿರೋಧಿಸಿ ಅಚ್ಚಗನ್ನಡದ ಬಳಕೆಗೆ ಪ್ರೇರೇಪಿಸಿದರು.
ಬಸವಣ್ಣ, ಅಲ್ಲಮಪ್ರಭು, ಕುಮಾರವ್ಯಾಸ, ಪುರಂದರದಾಸರಂತಹ ಶರಣರು, ಕವಿಗಳು ಮತ್ತು ದಾಸರು ಸುಲಭವಾದ ಹಾಗೂ ಸುಂದರವಾದ ಮಾತುಗಳಿಂದ ಜನರ ಹೃದಯ ಮುಟ್ಟುವಂತೆ ತಮ್ಮ ಅನುಭವಗಳನ್ನು ಅಭಿವ್ಯಕ್ತಪಡಿಸಿ ಭಾಷೆಯನ್ನು ಹದಗೊಳಿಸಿದರು.
ಕನ್ನಡವು ಸಂಸ್ಕೃತ, ಪ್ರಾಕೃತ, ಪರ್ಷಿಯನ್, ಪೋರ್ಚುಗೀಸ್ ಹಾಗೂ ಇಂಗ್ಲಿಷ್ ಭಾಷೆಗಳಿಂದ ಹಲವಾರು ಪದಗಳನ್ನು ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳದೆ ಎರವಲಾಗಿ ಸ್ವೀಕರಿಸಿತು. ಹಾಗೆಯೇ ನೆರೆಹೊರೆಯ ಗಡಿಭಾಷೆಗಳೊಡನೆ ಕೊಡುಕೊಳ್ಳುವಿಕೆ ಮತ್ತು ಹೊಸ ನುಡಿಗಟ್ಟುಗಳ ಸೃಷ್ಟಿಯಿಂದ ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡಿತು.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ:
1. "ಸಂಸ್ಕೃತಿಯ ಇತಿಹಾಸ ಉಳಿಯಿತು"
•ಆಯ್ಕೆ: ಈ ವಾಕ್ಯವನ್ನು ಎಂ. ಮರಿಯಪ್ಪಭಟ್ಟರು ರಚಿಸಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
•
•ಸಂದರ್ಭ: ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿಯಿತು. ಪ್ರಗತಿಪಥ ಸುಗಮವಾಯಿತು ಎಂದು ಲೇಖಕರು ಓದುಗರಿಗೆ ಲಿಪಿಯ ಉಗಮ ಮತ್ತು ಭಾಷೆಯ ಬೆಳವಣಿಗೆಯಿಂದ ಮಾನವನಿಗೆ ಉಂಟಾದ ಪ್ರಯೋಜನಗಳನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಓದುಗರಿಗೆ ಹೇಳಿದ್ದಾರೆ.
•
•ಸ್ವಾರಸ್ಯ: ಮಾನವನು ಲಿಪಿಯ ಮುಖಾಂತರ ಬರೆದಿಡಲು ಆರಂಭಿಸಿದನು. ಇದರಿಂದ ಜ್ಞಾನ ಭಂಡಾರ ಮತ್ತು ಸಂಸ್ಕೃತಿಯ ಇತಿಹಾಸ ಭದ್ರವಾಗಿ ಉಳಿಯಿತು ಎಂಬ ಮೌಲ್ಯ ಈ ಸಾಲಿನಲ್ಲಿದೆ.
2. “ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ”
•ಆಯ್ಕೆ: ಈ ವಾಕ್ಯವನ್ನು ಎಂ. ಮರಿಯಪ್ಪಭಟ್ಟರು ರಚಿಸಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
•
•ಸಂದರ್ಭ: ನಮಗೆ ತುಪ್ಪವೂ ಬೇಕು; ಎಣ್ಣೆಯೂ ಬೇಕು. ಸಂಸ್ಕೃತವೂ ಬೇಕು; ಕನ್ನಡವೂ ಬೇಕು. ಆದರೆ ಎಣ್ಣೆ- ತುಪ್ಪದ ಅಸ್ವಾದು ಮಿಶ್ರಣಬೇಡ. ಕನ್ನಡ ಭಾಷೆಯಲ್ಲಿ ಸಂಸ್ಕೃತದ ಅತಿಯಾದ ಬಳಕೆಯನ್ನು ಖಂಡಿಸಿ 12ನೆಯ ಶತಮಾನದ ಕವಿ ನಯಸೇನನು ಹೇಳಿದ ಮಾತನ್ನು ಲೇಖಕರು ಓದುಗರಿಗೆ ಹೇಳಿದ್ದಾರೆ.
•
•ಸ್ವಾರಸ್ಯ: ಕನ್ನಡದೊಂದಿಗೆ ಅನಗತ್ಯವಾಗಿ ಸಂಸ್ಕೃತವನ್ನು ಬೆರೆಸಬಾರದು ಎಂಬುದು ನಯಸೇನನ ಆಶಯವಾಗಿತ್ತು. ಇದು ಕನ್ನಡ ಭಾಷೆಯ ಸ್ವಂತಿಕೆ ಮತ್ತು ಶುದ್ಧತೆಯ ಬಗೆಗಿನ ಮೌಲ್ಯವನ್ನು ತಿಳಿಸುತ್ತದೆ.
3. "ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ"
•ಆಯ್ಕೆ: ಈ ವಾಕ್ಯವನ್ನು ಎಂ. ಮರಿಯಪ್ಪಭಟ್ಟರು ರಚಿಸಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
•
•ಸಂದರ್ಭ: ಹದಗೊಂಡ ಕನ್ನಡ ಭಾಷೆ ಅದು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗರಂಗ ಹೇಳಿರುವುದನ್ನು ಉಲ್ಲೇಖಿಸುವಾಗ ಲೇಖಕರು ಓದುಗರಿಗೆ ಹೇಳಿದ್ದಾರೆ.
•
•ಸ್ವಾರಸ್ಯ: ಕನ್ನಡ ಭಾಷೆಯು ಸಿಪ್ಪೆ ತೆಗೆದ ಕಬ್ಬಿನಂತೆ ರುಚಿಕರ ಎಂದು ಕನ್ನಡ ಭಾಷೆಯ ಸೊಬಗನ್ನು ಇಲ್ಲಿ ಮೌಲ್ಯಯುತವಾಗಿ ವರ್ಣಿಸಲಾಗಿದೆ.
4. "ಒಬ್ಬ ತಾಯಿಯ ಗಾನದ ಶ್ರುತಿಯಂತೆ"
•ಆಯ್ಕೆ: ಈ ವಾಕ್ಯವನ್ನು ಎಂ. ಮರಿಯಪ್ಪಭಟ್ಟರು ರಚಿಸಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
•
•ಸಂದರ್ಭ: ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ, ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ಸಂಸ್ಕೃತಿ ಮುಂದುವರಿಯುತ್ತದೆ. ಭಾಷೆಗಳಲ್ಲಿ ಮೇಲು-ಕೀಳು ಎಂಬುದಿಲ್ಲ, ಎಲ್ಲ ಭಾಷೆಗಳೂ ಸಮಾನ ಎಂದು ವಿವರಿಸುವಾಗ ಲೇಖಕರು ಓದುಗರಿಗೆ ಈ ಮಾತನ್ನು ಹೇಳಿದ್ದಾರೆ.
•
•ಸ್ವಾರಸ್ಯ: ಒಬ್ಬ ತಾಯಿಯ ಗಾನದ ಶ್ರುತಿಯಂತೆ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನವಿದೆ. ಇತರ ಭಾಷೆಗಳನ್ನು ದ್ವೇಷಿಸದೆ, ಎಲ್ಲವನ್ನೂ ಗೌರವಿಸಬೇಕು ಎಂಬ ಸಮನ್ವಯದ ಮೌಲ್ಯ ಈ ಸಾಲಿನಲ್ಲಿದೆ.
ಉ. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ
1.ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ ವ್ಯಕ್ತಿ ಜಂತುವೇ ಸರಿ.
2.ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
3.ಕನ್ನಡ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದೆ.
4.ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ.
5.ನಮ್ಮ ಭಾಷೆ ಗದ್ಯ ಭಾಗದ ಆಕರ ಗ್ರಂಥ 'ಕನ್ನಡ ಸಂಸ್ಕೃತಿ'.
ಆ. ಕೊಟ್ಟಿರುವ ಕನ್ನಡರೂಪಗಳ ಮೂಲರೂಪ (ಇಂಗ್ಲಿಷ್ ಪದಗಳು):
•ಹೋಟ್ಲು -> ಹೋಟೆಲ್ (Hotel)
•ಇಸ್ಕೂಲು -> ಸ್ಕೂಲ್ (School)
•ಆಫೀಸು -> ಆಫೀಸ್ (Office)
•ಲೈಟು -> ಲೈಟ್ (Light)
•ಹಾಸ್ಪಿಟಲ -> ಹಾಸ್ಪಿಟಲ್ (Hospital)